Subscribe Now
Trending News

Blog Post

ಬಡ ರೋಗಿಗಳಿಗೆ ಆತಂಕ: ನಾಳೆಯಿಂದ ಸರ್ಕಾರಿ ವೈದ್ಯರ ಮುಷ್ಕರ – OPD ಸೇವೆ ಸ್ಥಗಿತ!
ಟ್ರೆಂಡಿಂಗ್ ಸುದ್ದಿಗಳು

ಬಡ ರೋಗಿಗಳಿಗೆ ಆತಂಕ: ನಾಳೆಯಿಂದ ಸರ್ಕಾರಿ ವೈದ್ಯರ ಮುಷ್ಕರ – OPD ಸೇವೆ ಸ್ಥಗಿತ! 

ಬೆಂಗಳೂರು: ರಾಜ್ಯದ ಆರೋಗ್ಯ ಕ್ಷೇತ್ರದಲ್ಲಿ ನಾಳೆಯಿಂದ (ಬುಧವಾರ) ಬಿಕ್ಕಟ್ಟು ಸೃಷ್ಟಿಯಾಗುವ ಲಕ್ಷಣಗಳು ದಟ್ಟವಾಗಿವೆ. ವಿವಿಧ ದೀರ್ಘಕಾಲದ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಆರೋಗ್ಯ ಇಲಾಖೆಯ ವೈದ್ಯರು ಮತ್ತು ಸಿಬ್ಬಂದಿ ವರ್ಗದವರು ನಾಳೆಯಿಂದ ರಾಜ್ಯಾದ್ಯಂತ ಪ್ರತಿಭಟನೆಗೆ ಮುಂದಾಗಿದ್ದಾರೆ.

ನಾಳೆಯಿಂದ ಹೊರ ರೋಗಿಗಳ ವಿಭಾಗದ (OPD) ಕರ್ತವ್ಯವನ್ನು ವೈದ್ಯರು ಬಹಿಷ್ಕರಿಸಲಿದ್ದಾರೆ. ಹೀಗಾಗಿ ಸಾಮಾನ್ಯ ತಪಾಸಣೆಗಾಗಿ ಬರುವ ರೋಗಿಗಳಿಗೆ ಚಿಕಿತ್ಸೆ ಲಭ್ಯವಿರುವುದಿಲ್ಲ.

ಕೇವಲ ತುರ್ತು ಚಿಕಿತ್ಸೆ (Emergency Services) ಮಾತ್ರ ಲಭ್ಯವಿರಲಿದ್ದು, ವೈದ್ಯರು ಮಾ.15ರವರೆಗೆ ಕಪ್ಪು ಪಟ್ಟಿ ಧರಿಸಿ ಕೆಲಸ ಮಾಡಲಿದ್ದಾರೆ.

ಒಂದು ವೇಳೆ ಸರ್ಕಾರ ಮಾ.15ರ ಒಳಗಾಗಿ ಸ್ಪಂದಿಸದಿದ್ದರೆ, ಮಾ.16ರಿಂದ ಸಂಪೂರ್ಣ ಕೆಲಸ ಸ್ಥಗಿತಗೊಳಿಸಲು ವೈದ್ಯರ ಸಂಘ ನಿರ್ಧರಿಸಿದೆ.

ವೈದ್ಯರು ಸರ್ಕಾರಕ್ಕೆ ಮಂಡಿಸಿರುವ ಬೇಡಿಕೆಗಳ ಪಟ್ಟಿ ಸುದೀರ್ಘವಾಗಿದೆ:

ಮುಂಬಡ್ತಿ ಮತ್ತು ಜ್ಯೇಷ್ಠತೆ: ನನೆಗುದಿಗೆ ಬಿದ್ದಿರುವ ಸರ್ಕಾರಿ ವೈದ್ಯರ ಪ್ರಮೋಷನ್ ಪ್ರಕ್ರಿಯೆಯನ್ನು ಕೂಡಲೇ ಪೂರ್ಣಗೊಳಿಸಬೇಕು.

ಹಳೇ ನಿಯಮಕ್ಕೆ ತಿದ್ದುಪಡಿ: 1973ರ ಕಾಲದ ಹಳೇ ನೇಮಕಾತಿ ನಿಯಮಗಳನ್ನು ಇಂದಿನ ಕಾಲಘಟ್ಟಕ್ಕೆ ತಕ್ಕಂತೆ ಬದಲಿಸಬೇಕು.

ಔಷಧಿಗಳ ಕೊರತೆ ನೀಗಿಸಿ: ಸರ್ಕಾರಿ ಆಸ್ಪತ್ರೆಗಳಲ್ಲಿ ಬಿಪಿ, ಶುಗರ್ ಹಾಗೂ ಜೀವರಕ್ಷಕ ಔಷಧಿಗಳ ತೀವ್ರ ಅಭಾವವಿದ್ದು, ಕೂಡಲೇ ಪೂರೈಕೆ ಮಾಡಬೇಕು.

ಉದ್ಯೋಗ ಭದ್ರತೆ: NHM ಮತ್ತು ಗುತ್ತಿಗೆ ಆಧಾರಿತ ಸಿಬ್ಬಂದಿಗೆ ಭದ್ರತೆ ನೀಡುವುದರ ಜೊತೆಗೆ ಪ್ರತಿ ತಿಂಗಳ ಮೊದಲ ವಾರವೇ ಸಂಬಳ ನೀಡಬೇಕು.

ಈಗಾಗಲೇ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು ಮಾಹಿತಿ ನೀಡಲಾಗಿದ್ದರೂ, ಸರ್ಕಾರ ಈವರೆಗೂ ಯಾವುದೇ ಮಾತುಕತೆಗೆ ಮುಂದಾಗಿಲ್ಲ. ಸರ್ಕಾರದ ಈ ಮೌನವು ವೈದ್ಯರ ಆಕ್ರೋಶಕ್ಕೆ ತುಪ್ಪ ಸುರಿದಂತಾಗಿದ್ದು, ಒಂದು ವೇಳೆ ಮುಷ್ಕರ ತೀವ್ರಗೊಂಡರೆ ಸರ್ಕಾರಿ ಆಸ್ಪತ್ರೆಗಳನ್ನೇ ನಂಬಿರುವ ಸಾವಿರಾರು ಬಡ ರೋಗಿಗಳ ಸ್ಥಿತಿ ಅಯೋಮಯವಾಗಲಿದೆ.

ವರದಿ :- ಆಂಟೋನಿ ಪತ್ರಕರ್ತ

Related posts

Leave a Reply

Required fields are marked *