Share News

ಕೆ.ಆರ್.ನಗರ: ತಾಲ್ಲೂಕಿನಲ್ಲಿ ಒಂಟಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ಮಾಂಗಲ್ಯ ಸರ ಹಾಗೂ ಚಿನ್ನದ ಸರಗಳನ್ನು ಕಿತ್ತು ಪರಾರಿಯಾಗುತ್ತಿದ್ದ ಮೂವರು ಅಂತರ ಜಿಲ್ಲಾ ಸರಗಳ್ಳರನ್ನು ಕೆ.ಆರ್.ನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

​ಬಂಧಿತ ಆರೋಪಿಗಳು:

ಮಂಡ್ಯ ಜಿಲ್ಲೆಯ ಅಗಸರಹಳ್ಳಿ ಗ್ರಾಮದ ಎ.ವಿ. ಕೃಷ್ಣಕುಮಾರ್ (35), ಕೆ.ಆರ್. ನಗರ ತಾಲ್ಲೂಕು ಸಾತಿಗ್ರಾಮದ ಎಸ್.ಆರ್. ನವೀನ್‌ಕುಮಾರ್ (36) ಹಾಗೂ ಅದೇ ಗ್ರಾಮದ ಸೈಯ್ಯದ್ ಫರ್ಹಾನ್ (26) ಬಂಧಿತ ಕಿರಾತಕರು.

ಕಾರ್ಯಾಚರಣೆ ಮತ್ತು ವಶಪಡಿಸಿಕೊಂಡ ವಸ್ತುಗಳು:

ಬಂಧಿತರಿಂದ ಪೊಲೀಸರು 21.28 ಲಕ್ಷ ರೂಪಾಯಿ ಮೌಲ್ಯದ 152 ಗ್ರಾಂ ಚಿನ್ನದ ಆಭರಣಗಳು ಹಾಗೂ ಕೃತ್ಯಕ್ಕೆ ಬಳಸುತ್ತಿದ್ದ 3 ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ, ಅವರು ನಾಲ್ಕು ಸರಗಳ್ಳತನ ಹಾಗೂ ಒಂದು ಮನೆಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ.

ಏಪ್ರಿಲ್ 6ರಂದು ಲಾಳನಹಳ್ಳಿ ಗ್ರಾಮದ ಅನ್ನಪೂರ್ಣ ಎಂಬುವವರು ಸಂಜೆ ವೇಳೆ ಪಟ್ಟಣಕ್ಕೆ ನಡೆದುಕೊಂಡು ಹೋಗುತ್ತಿದ್ದಾಗ, ದ್ವಿಚಕ್ರ ವಾಹನದಲ್ಲಿ ಬಂದ ಈ ಖದೀಮರು ಆಕೆಯ ಕತ್ತಿನಲ್ಲಿದ್ದ 35 ಗ್ರಾಂ ಮಾಂಗಲ್ಯ ಸರವನ್ನು ಕಿತ್ತು ಮಿಂಚಿನ ವೇಗದಲ್ಲಿ ಪರಾರಿಯಾಗಿದ್ದರು. ಈ ಬಗ್ಗೆ ದಾಖಲಾದ ದೂರಿನ ಅನ್ವಯ ಕೆ.ಆರ್. ನಗರ ಪೊಲೀಸರು ವಿಶೇಷ ತಂಡ ರಚಿಸಿ ಕಾರ್ಯಾಚರಣೆ ನಡೆಸಿದ್ದರು.

ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಲ್ಲಿ ನಡೆದ ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಸರ್ಕಲ್ ಇನ್ಸ್‌ಪೆಕ್ಟರ್ ಎಸ್. ಶಿವಪ್ರಕಾಶ್, ಇನ್ಸ್‌ಪೆಕ್ಟರ್ ಆರ್. ಸ್ವಾಮಿಗೌಡ ಹಾಗೂ ಸಿಬ್ಬಂದಿಗಳಾದ ಪರಶುರಾಮೇಗೌಡ, ಕೆ.ವಿ. ಗೋವಿಂದರಾಜು, ಗುರುಪ್ರಸಾದ್, ಧರ್ಮ, ಪಿ.ಹೆಚ್. ಕೃಷ್ಣ, ಗಿರೀಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.

​ಸಾರ್ವಜನಿಕ ರಸ್ತೆಗಳಲ್ಲಿ ಒಂಟಿಯಾಗಿ ಓಡಾಡುವ ಮಹಿಳೆಯರನ್ನು ಸಂಚು ಹೂಡಿ ಲೂಟಿ ಮಾಡುತ್ತಿದ್ದ ಈ ಗ್ಯಾಂಗ್ ಬಂಧನದಿಂದ ಕೆ.ಆರ್.ನಗರದ ಜನತೆ ನಿಟ್ಟುಸಿರು ಬಿಟ್ಟಿದ್ದಾರೆ.


Share News