ಶಿರಸಿ/ಯಲ್ಲಾಪುರ: ಎಪಿಸಿಸಿಎಫ್ (ಜಾಗೃತ) ಮಾರ್ಗದರ್ಶನದಲ್ಲಿ ಹಾಗೂ ಅಪರಾಧ ನಿಯಂತ್ರಣ ಕೋಶದ ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಅರಣ್ಯ ಸಂಚಾರಿ ದಳದ ಸಿಬ್ಬಂದಿ, ಯಲ್ಲಾಪುರದಲ್ಲಿ ಅಪರೂಪದ ಕಾಡುಪ್ರಾಣಿಗಳ ಅಂಗಾಗಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಶಿರಸಿ ಅರಣ್ಯ ಸಂಚಾರಿ ದಳದ ಡಿಸಿಎಫ್ ಹಾಗೂ ಎಸಿಎಫ್ ಅವರ ನೇತೃತ್ವದಲ್ಲಿ ಈ ದಾಳಿ ನಡೆದಿದೆ.
ವಶಪಡಿಸಿಕೊಂಡ ವನ್ಯಜೀವಿ ವಸ್ತುಗಳು ಹಾಗೂ ವಾಹನಗಳು:
ಚಿಪ್ಪು ಹಂದಿ: ೧೫.೭೪೮ ಕೆಜಿ ಚಿಪ್ಪುಗಳು (Pangolin Scales)
ಉಗುರುಗಳು: ೮ ಜೊತೆ ಹುಲಿ ಉಗುರುಗಳು ಹಾಗೂ ೧೨ ಜೊತೆ ಚಿರತೆ ಉಗುರುಗಳು
ಹಲ್ಲುಗಳು/ಕೋರೆಗಳು: ೨ ಜೊತೆ ಹುಲಿ ಹಲ್ಲು, ೩ ಜೊತೆ ಚಿರತೆ ಹಲ್ಲು ಹಾಗೂ ೨ ಜೊತೆ ಕಾಡುಹಂದಿಯ ಕೋರೆಗಳು
ಕೊಂಬುಗಳು: ೨ ಜೊತೆ ಕಾಡೆಮ್ಮೆಯ ಕೊಂಬುಗಳು
ವಾಹನಗಳು: ಕೃತ್ಯಕ್ಕೆ ಬಳಸಿದ್ದ ೧ ಅಪಾಚಿ ಬೈಕ್ ಹಾಗೂ ೧ ಹೀರೋ ಡೆಸ್ಟಿನಿ ಸ್ಕೂಟರ್
ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಎಸಿಎಫ್ ರಾಘವೇಂದ್ರ ನಾಯ್ಕ್, ಆರ್ಎಫ್ಒ ಶಿಲ್ಪಾ ನಾಯ್ಕ್ ಹಾಗೂ ಅರಣ್ಯ ಸಂಚಾರಿ ದಳದ ಸಿಬ್ಬಂದಿಗಳು ಸಕ್ರಿಯವಾಗಿ ಭಾಗವಹಿಸಿದ್ದರು. ಪ್ರಕರಣ ದಾಖಲಿಸಿಕೊಂಡಿರುವ ಅರಣ್ಯ ಇಲಾಖೆ, ಜಾಲದ ಹಿನ್ನೆಲೆ ಕುರಿತು ತನಿಖೆ ಮುಂದುವರಿಸಿದೆ.
