ಬೆಂಗಳೂರು: ರಾಪಿಡೋ ಆಯಪ್ ಮೂಲಕ ಆಟೋ ಬುಕ್ ಮಾಡಿ, ನಿರ್ಜನ ಪ್ರದೇಶದಲ್ಲಿ ಚಾಲಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ವಾಹನ ಹಾಗೂ ಮೊಬೈಲ್ ದೋಚಿದ್ದ ಕುಖ್ಯಾತ ಆರೋಪಿಯನ್ನು ಬಾಗಲೂರು ಪೊಲೀಸರು ಬಂಧಿಸಿದ್ದಾರೆ.
ಮಾರ್ಚ್ 1ರಂದು ದರ್ಶನ್ ಸಿ.ಆರ್. ಎಂಬ ಚಾಲಕ ಎಲೆಕ್ಟ್ರಾನಿಕ್ ಸಿಟಿ ಹುಸ್ಕೂರು ಬಳಿ ಇದ್ದಾಗ, ಇಬ್ಬರು ಕಿಡಿಗೇಡಿಗಳು ಬೂದಿಗೆರೆ-ದೇವನಹಳ್ಳಿ ರಸ್ತೆಗೆ ಆಟೋ ಬುಕ್ ಮಾಡಿದ್ದರು. ಪ್ರಯಾಣದ ಮಧ್ಯೆ ಜೊನ್ನಹಳ್ಳಿ ಗ್ರಾಮದ ಬಳಿ ಕೆ.ಐ.ಎ.ಡಿ.ಬಿ ಇಂಡಸ್ಟ್ರಿಯಲ್ ಏರಿಯಾದಲ್ಲಿ ಆಟೋ ತಡೆದ ಆರೋಪಿಗಳು, ಚಾಲಕನಿಗೆ ಚಾಕುವಿನಿಂದ ಇರಿದು ಗಾಯಗೊಳಿಸಿದ್ದರು. ಬಳಿಕ ಚಾಲಕನ ಬಳಿಯಿದ್ದ ಎರಡು ಮೊಬೈಲ್ ಫೋನ್ಗಳು, ನಗದು ಹಾಗೂ ಆಟೋ ರಿಕ್ಷಾವನ್ನು ಕಿತ್ತುಕೊಂಡು ಪರಾರಿಯಾಗಿದ್ದರು.
ಪ್ರಕರಣದ ತನಿಖೆ ಚುರುಕುಗೊಳಿಸಿದ ಪೊಲೀಸರು ಮಾರ್ಚ್ 25ರಂದು ಹೆಚ್.ಎಸ್.ಆರ್ ಲೇಔಟ್ನ ನ್ಯೂ ಹೋಫ್ ಪೌಂಡೇಷನ್ ಬಳಿ ಮೊದಲ ಆರೋಪಿ (A1) ಕನಿಷ್ ಕಪಿಲ್ ಹಿರಸ್ಕರ್ (21) ಎಂಬಾತನನ್ನು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ವಶಪಡಿಸಿಕೊಂಡ ಸ್ವತ್ತುಗಳು:
ಬಂಧಿತನಿಂದ ಒಟ್ಟು 3,20,000/- ರೂ. ಮೌಲ್ಯದ ಸ್ವತ್ತುಗಳನ್ನು ಅಮಾನತ್ತುಪಡಿಸಿಕೊಳ್ಳಲಾಗಿದೆ:
ಆಟೋ ರಿಕ್ಷಾ: 2,50,000/- ರೂ. ಮೌಲ್ಯದ ಒಂದು ವಾಹನ.
ಮೊಬೈಲ್ಗಳು: 70,000/- ರೂ. ಮೌಲ್ಯದ ಎರಡು ಫೋನ್ಗಳು.
ಕೃತ್ಯಕ್ಕೆ ಬಳಸಿದ ವಸ್ತುಗಳು: ಒಂದು ಮೊಬೈಲ್ ಫೋನ್, ಕಲ್ಲು ಮತ್ತು ಒಂದು ನೇಲ್ ಕಟರ್.
ಈಶಾನ್ಯ ವಿಭಾಗದ ಡಿಸಿಪಿ ಜಿ.ಕೆ ಮಿಥುನ್ ಕುಮಾರ್ ಹಾಗೂ ಎಸಿಪಿ ಮುರುಗೇಂದ್ರಯ್ಯ ಅವರ ಮಾರ್ಗದರ್ಶನದಲ್ಲಿ ಬಾಗಲೂರು ಇನ್ಸ್ಪೆಕ್ಟರ್ ಅಶೋಕ್ ಬಿ.ಎಸ್, ಪಿಎಸ್ಐ ಪೂಜೇರಿ ಬಾಳಯ್ಯ ಮತ್ತು ತಂಡವು ತಾಂತ್ರಿಕ ವಿಭಾಗದ ನೆರವಿನಿಂದ ಈ ಕಾರ್ಯಾಚರಣೆ ನಡೆಸಿದೆ. ಪ್ರಸ್ತುತ ಎರಡನೇ ಆರೋಪಿಗಾಗಿ (A2) ತೀವ್ರ ಶೋಧ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.