ಚಿತ್ರದುರ್ಗ: ವಿದ್ಯುತ್ ಸ್ಪರ್ಶಿಸಿ ನವಿಲು ಸಾವನ್ನಪ್ಪಿದ್ದು, ಆ ನವಿಲನ್ನು ತಿನ್ನಲು ಯತ್ನಿಸಿದ ಚಿರತೆಯೂ ಸಹ ವಿದ್ಯುತ್ ತಂತಿ ತಾಗಿ ದುರಂತವಾಗಿ ಮೃತಪಟ್ಟ ಭೀಕರ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಕಬ್ಬಿನಕೆರೆ ಗ್ರಾಮದಲ್ಲಿ ಸಂಭವಿಸಿದೆ.
ಕಬ್ಬಿನಕೆರೆ ಗ್ರಾಮದ ಕುಡಿಯುವ ನೀರಿನ ಪಂಪ್ಸೆಟ್ಗೆ ಅಳವಡಿಸಲಾಗಿದ್ದ ವಿದ್ಯುತ್ ಪರಿವರ್ತಕದ (ಟ್ರಾನ್ಸ್ಫಾರ್ಮರ್) ಬಳಿ ಈ ಘಟನೆ ನಡೆದಿದೆ.
ಘಟನೆಯ ವಿವರ:
ಮೊದಲು ನವಿಲೊಂದು ವಿದ್ಯುತ್ ಸ್ಪರ್ಶಿಸಿ ಟ್ರಾನ್ಸ್ಫಾರ್ಮರ್ ಮೇಲೆಯೇ ಅಸುನೀಗಿತ್ತು. ಇದನ್ನು ಗಮನಿಸಿದ ಚಿರತೆಯು ನವಿಲನ್ನು ಭೇಟೆಯಾಡಿ ತಿನ್ನುವ ದುರಾಶೆಯಿಂದ ಟ್ರಾನ್ಸ್ಫಾರ್ಮರ್ ಮೇಲೇರಿದೆ. ಈ ವೇಳೆ ಚಿರತೆಗೂ ತೀವ್ರ ಪ್ರಮಾಣದ ವಿದ್ಯುತ್ ಪ್ರವಹಿಸಿ, ಅದು ಸಹ ಟ್ರಾನ್ಸ್ಫಾರ್ಮರ್ ಮೇಲೆಯೇ ಸಾವನ್ನಪ್ಪಿದೆ.
ವಿಷಯ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಟ್ರಾನ್ಸ್ಫಾರ್ಮರ್ ಮೇಲಿದ್ದ ನವಿಲು ಹಾಗೂ ಚಿರತೆಯ ಮೃತದೇಹಗಳನ್ನು ಕೆಳಗಿಳಿಸಿ ತೆರವುಗೊಳಿಸುವ ಕಾರ್ಯಾಚರಣೆ ನಡೆಸಿದರು.
ಈ ಸಂಬಂಧ ಹೊಸದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.