ಬಳ್ಳಾರಿ: ಅತ್ಯಂತ ಬಿಗಿ ಭದ್ರತೆಯ ಕೇಂದ್ರ ಕಾರಾಗೃಹ ಎಂದು ಹೆಸರಾದ ಬಳ್ಳಾರಿ ಜೈಲಿನಲ್ಲಿ ಖೈದಿಗಳ ದರ್ಬಾರ್ ಮಿತಿಮೀರಿದೆ. ಜೈಲಿನೊಳಗೆ ನಿಷೇಧಿತ ವಸ್ತುಗಳ ಪೂರೈಕೆಗೆ ಬ್ರೇಕ್ ಹಾಕಿದ್ದಕ್ಕೆ ರೊಚ್ಚಿಗೆದ್ದ ಖೈದಿಗಳ ಗುಂಪೊಂದು ಜೈಲರ್ ಮೇಲೆಯೇ ಭೌತಿಕ ಹಲ್ಲೆ ನಡೆಸಿರುವ ಆಘಾತಕಾರಿ ಘಟನೆ ನಡೆದಿದೆ.
ಬಳ್ಳಾರಿ ಕೇಂದ್ರ ಕಾರಾಗೃಹದ ಜೈಲರ್ ಅಶೋಕ ಹೊಸಮನಿ ಅವರು ಹಲ್ಲೆಗೊಳಗಾದ ಅಧಿಕಾರಿ. ಇತ್ತೀಚಿನ ದಿನಗಳಲ್ಲಿ ಜೈಲಿನೊಳಗೆ ಬೀಡಿ, ಸಿಗರೇಟ್ ಹಾಗೂ ಗಾಂಜಾದಂತಹ ಅಮಲು ಪದಾರ್ಥಗಳ ಅಕ್ರಮ ಪ್ರವೇಶವನ್ನು ತಡೆಯಲು ಜೈಲು ಆಡಳಿತ ಮಂಡಳಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿತ್ತು. ಇದರಿಂದ ವ್ಯಸನಕಾರಿ ವಸ್ತುಗಳು ಸಿಗದೆ ಅಸಮಾಧಾನಗೊಂಡಿದ್ದ ಖೈದಿಗಳ ಗುಂಪು ಅಧಿಕಾರಿಗಳ ವಿರುದ್ಧ ತಿರುಗಿಬಿದ್ದಿದೆ.
ಜೈಲಿನಲ್ಲಿರುವ ಅಲ್ತಾಪ್, ರಷೀದ್, ವಿನೋದ್, ಸಲೀಂ ಮತ್ತು ರಾಜು ಎಂಬ ಐವರು ಖೈದಿಗಳು ಈ ಕೃತ್ಯ ಎಸಗಿದ್ದಾರೆ. ಮೊದಲಿನಿಂದಲೂ ಈ ತಂಡ ಸಣ್ಣಪುಟ್ಟ ವಿಚಾರಕ್ಕೆ ಸಿಬ್ಬಂದಿಯೊಂದಿಗೆ ಕ್ಯಾತೆ ತೆಗೆಯುತ್ತಿತ್ತು. ಜೈಲರ್ ಅಶೋಕ ಹೊಸಮನಿ ಅವರೊಂದಿಗೆ ವಾಗ್ವಾದಕ್ಕಿಳಿದ ಈ ಐವರು, ಏಕಾಏಕಿ ಅವರ ಮೇಲೆ ಮುಗಿಬಿದ್ದಿದ್ದಾರೆ. ದಾಳಿಯ ವೇಳೆ ಜೈಲರ್ ಅವರ ಕೈ ಹಾಗೂ ಕುತ್ತಿಗೆಯ ಭಾಗಕ್ಕೆ ತೀವ್ರ ಗಾಯಗಳಾಗಿದ್ದು, ಅವರನ್ನು ಜೈಲಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಯ ವಿಷಯ ತಿಳಿಯುತ್ತಿದ್ದಂತೆಯೇ ಬಳ್ಳಾರಿ ಎಎಸ್ಪಿ (ASP) ನವೀನ್ ಕುಮಾರ್ ಅವರು ಕಾರಾಗೃಹಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಲ್ಲೆ ನಡೆಸಿದ ಖೈದಿಗಳ ಬಗ್ಗೆ ಮಾಹಿತಿ ಪಡೆದ ಅವರು, ಜೈಲಿನೊಳಗೆ ಕಾನೂನು ಸುವ್ಯವಸ್ಥೆ ಕಾಪಾಡಲು ಮತ್ತು ಇಂತಹ ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದಾರೆ.
ಜೈಲರ್ ಮೇಲಿನ ಈ ದಾಳಿಯು ಕಾರಾಗೃಹದ ಭದ್ರತೆ ಮತ್ತು ಖೈದಿಗಳ ಉದ್ಧಟತನದ ಬಗ್ಗೆ ಆತಂಕ ಮೂಡಿಸಿದೆ.