ಸಕಲೇಶಪುರ: ತಾಲ್ಲೂಕಿನಲ್ಲಿ ಮಾನವ ಮತ್ತು ವನ್ಯಜೀವಿಗಳ ಸಂಘರ್ಷ ಹಾಗೂ ಪ್ರಾಣಿಗಳ ಸಂಕಷ್ಟ ಮುಂದುವರಿದಿದ್ದು, ಕಣ್ಣು ಕಾಣದ ಕಾಡುಕೋಣವೊಂದು ಕಳೆದ ಮೂರು ವಾರಗಳಿಂದ ಗ್ರಾಮವೊಂದರಲ್ಲಿ ದಾರಿ ಕಾಣದೆ ಪರದಾಡುತ್ತಿರುವ ಭಾವುಕ ಘಟನೆ ಬೆಳಕಿಗೆ ಬಂದಿದೆ.
ತಾಲ್ಲೂಕಿನ ಚಿಕ್ಕೊಳಲೆ ಗ್ರಾಮದ ಮಾಜಿ ಸಚಿವ ಸಗೀರ್ ಅಹಮದ್ ಅವರ ಕಾಫಿ ತೋಟದ ಬಳಿ ಈ ಕಾಡುಕೋಣ ಆಶ್ರಯ ಪಡೆದಿದೆ.
ಸಂಕಷ್ಟದಲ್ಲಿ ಕಾಡುಕೋಣ & ಗ್ರಾಮಸ್ಥರಲ್ಲಿ ಭೀತಿ:
ದೃಷ್ಟಿದೋಷದಿಂದ ಬಳಲುತ್ತಿರುವ ಈ ಕಾಡುಕೋಣಕ್ಕೆ ಕಾಡಿಗೆ ಮರಳಿ ಹೋಗಲು ಸಾಧ್ಯವಾಗದೆ ದಿಕ್ಕು ತೋಚದಂತಾಗಿದೆ. ಅಲೆಯುವಾಗ ಗೋಡೆ ಹಾಗೂ ತಂತಿ ಕಂಬಗಳಿಗೆ ಡಿಕ್ಕಿ ಹೊಡೆದು ಗಾಯಗೊಳ್ಳುತ್ತಿದೆ. ವಾಸದ ಮನೆಯ ಹಿಂಭಾಗದಲ್ಲೇ ಬಂದು ನಿಲ್ಲುತ್ತಿರುವುದರಿಂದ ತೋಟದ ಮಾಲೀಕರು ಹಾಗೂ ಮಹಿಳಾ ಕಾರ್ಮಿಕರು ಕೆಲಸಕ್ಕೆ ತೆರಳಲು ಆತಂಕಪಡುವಂತಾಗಿದೆ.
ಮಾಜಿ ಶಾಸಕ ಎಚ್.ಎಂ. ವಿಶ್ವನಾಥ್ ಮನವಿ:
ಸ್ಥಳದಲ್ಲಿದ್ದ ಕಾಡುಕೋಣದ ಸ್ಥಿತಿಯನ್ನು ವೀಡಿಯೋ ಮಾಡಿರುವ ಮಾಜಿ ಶಾಸಕ ಎಚ್.ಎಂ. ವಿಶ್ವನಾಥ್ ಅವರು, ಈ ದೃಶ್ಯವನ್ನು ಅರಣ್ಯ ಇಲಾಖೆಯ ಉನ್ನತಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ.
ಅರಣ್ಯ ಇಲಾಖೆ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ, ಅಸಹಾಯಕ ಸ್ಥಿತಿಯಲ್ಲಿರುವ ಈ ಕಾಡುಕೋಣವನ್ನು ಸುರಕ್ಷಿತವಾಗಿ ಸೆರೆಹಿಡಿದು ಸೂಕ್ತ ಚಿಕಿತ್ಸೆ ಕೊಡಿಸಬೇಕು ಹಾಗೂ ಅದನ್ನು ದಟ್ಟ ಅರಣ್ಯಕ್ಕೆ ಬಿಡಲು ಅಥವಾ ಪುನರ್ವಸತಿ ಕಲ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.