ಚಾಮರಾಜನಗರ: ಚಾಮರಾಜನಗರ ತಾಲೂಕಿನ ಹೆಗ್ಗೋಠಾರ ಗ್ರಾಮದ ದೊಡ್ಡಬೆಟ್ಟದ ಬಳಿ ಅಪರೂಪದ ಹಾಗೂ ಸಂರಕ್ಷಿತ ವನ್ಯಜೀವಿಯಾದ ಚಿಪ್ಪುಹಂದಿಯ (Pangolin) ಚಿಪ್ಪುಗಳನ್ನು ಹಾಗೂ ಅಕ್ರಮ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳ ಯಶಸ್ವಿಯಾಗಿ ಬಂಧಿಸಿದೆ.
ಬಂಧಿತ ಆರೋಪಿಯನ್ನು ಮಹೇಶ ನಾಯಕ ಎಚ್. (27) ಎಂದು ಗುರುತಿಸಲಾಗಿದೆ.
ಜುಲೈ 22 ರಂದು ಬೆಳಿಗ್ಗೆ 7:00 ಗಂಟೆಯ ಸುಮಾರಿಗೆ ಹೆಗ್ಗೋಠಾರ ಗ್ರಾಮದ ಸಮೀಪವಿರುವ ದೊಡ್ಡಬೆಟ್ಟದ ಬಳಿ ಆರೋಪಿಯು ಅಕ್ರಮ ವನ್ಯಜೀವಿ ಸಾಮಗ್ರಿಗಳನ್ನು ಮಾರಾಟ ಮಾಡಲು ಕಾಯುತ್ತಿದ್ದಾಗ, ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳ ತಕ್ಷಣ ದಾಳಿ ನಡೆಸಿ ಆತನನ್ನು ವಶಕ್ಕೆ ಪಡೆದಿದೆ.
ಚಿಪ್ಪುಹಂದಿಯ ಚಿಪ್ಪು: 2 ಕೆಜಿ 800 ಗ್ರಾಂ
ಶಸ್ತ್ರಾಸ್ತ್ರಗಳು: 4 ನಾಡ ಬಂದೂಕುಗಳು ಹಾಗೂ ಬಂದೂಕಿಗೆ ಬಳಸುವ ಇತರೆ ವಸ್ತುಗಳು
ವಾಹನ: 1 ಮೋಟಾರ್ ಬೈಕ್
ಅರಣ್ಯ ಘಟಕದ ಸಿಐಡಿ ಪೊಲೀಸ್ ಮಹಾನಿರ್ದೇಶಕರಾದ ಸಂಗೀತ ಜಿ. ಹಾಗೂ ಮಡಿಕೇರಿ ಸಿಐಡಿ ಅರಣ್ಯ ಘಟಕದ ಪೊಲೀಸ್ ಅಧೀಕ್ಷಕರಾದ ಪವನ್ ನೆಜ್ಜೂರು ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದೆ.
ದಾಳಿಯಲ್ಲಿ ಚಾಮರಾಜನಗರ ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳದ ಪೊಲೀಸ್ ಉಪನಿರೀಕ್ಷಕರಾದ ಯಾಸ್ಮೀನ್ ತಾಜ್, ಸಿಬ್ಬಂದಿಗಳಾದ ಎಚ್.ಡಿ. ಸ್ವಾಮಿ, ನವೀನ್ ಕುಮಾರ್, ವೀರಭದ್ರಪ್ಪ, ಬಸವಯ್ಯ, ಪ್ರಸಾದ್, ಗೋವಿಂದನಾಯಕ ಮತ್ತು ರಾಜು ಸಕ್ರಿಯವಾಗಿ ಪಾಲ್ಗೊಂಡಿದ್ದರು.
ಆರೋಪಿಯ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ ಹಾಗೂ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ತನಿಖೆ ಕೈಗೊಳ್ಳಲಾಗಿದೆ.