Share News

ಅಕ್ರಮ ಸಾರಾಯಿ ಸಾಗಾಟ: ಲಕ್ಷಾಂತರ ರೂ. ಮೌಲ್ಯದ ಗೋವಾ ಮದ್ಯ ಜಪ್ತಿ, ಧಾಬಾ ಮಾಲೀಕ ಬಂಧನ!

​ಧಾರವಾಡ: ಗೋವಾದಿಂದ ಧಾರವಾಡಕ್ಕೆ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಜಾಲದ ಮೇಲೆ ದಾಳಿ ನಡೆಸಿದ ಅಬಕಾರಿ ಇಲಾಖೆ ಅಧಿಕಾರಿಗಳು ಲಕ್ಷಾಂತರ ರೂಪಾಯಿ ಮೌಲ್ಯದ ಗೋವಾ ಮದ್ಯವನ್ನು ಜಪ್ತಿ ಮಾಡಿ, ಧಾಬಾ ಮಾಲೀಕನೊಬ್ಬನನ್ನು ಬಂಧಿಸಿದ್ದಾರೆ.

​ಧಾರವಾಡದ ಜೈಜೀನೇಂದರ ಕಾಲೊನಿ ನಿವಾಸಿ ಹಾಗೂ ಧಾಬಾ ವ್ಯಾಪಾರಿ ರೇವಣಸಾ ಪರಶುರಾಮ ಕಠಾರೆ ಬಂಧಿತ ಆರೋಪಿ.

​ಖಚಿತ ಮಾಹಿತಿ ಮೇರೆಗೆ ಬೆಳಗಿನ ಜಾವ ರೇಡ್:

ಆರೋಪಿಯು ಗೋವಾದಿಂದ ದುಬಾರಿ ಬ್ರ್ಯಾಂಡ್‌ಗಳ ಗೋವಾ ಸಾರಾಯಿ ಬಾಟಲಿಗಳನ್ನು ಯಾವುದೇ ಪಾಸ್ ಅಥವಾ ಪರ್ಮಿಟ್ ಇಲ್ಲದೆ ಅಕ್ರಮವಾಗಿ ಸಾಗಿಸುತ್ತಿದ್ದನು. ಈ ಕುರಿತು ಸಿಕ್ಕ ಖಚಿತ ಮಾಹಿತಿ ಆಧರಿಸಿ ಬೆಳಗಿನ ಜಾವ ಸುಮಾರು ೨:೨೦ರ ವೇಳೆಗೆ ಕಾರ್ಯಾಚರಣೆ ನಡೆಸಿದ ಅಬಕಾರಿ ಅಧಿಕಾರಿಗಳು, ಒಟ್ಟು ೧೫೨.೩೮೦ ಲೀಟರ್ ಗೋವಾ ಮದ್ಯವನ್ನು ಜಪ್ತಿ ಮಾಡಿದ್ದಾರೆ. ಇದರೊಂದಿಗೆ ಸಾಗಾಟಕ್ಕೆ ಬಳಸಿದ್ದ ಕಪ್ಪು ಬಣ್ಣದ ಹುಂಡೈ ಎಲಾಂಟ್ರಾ ಕಾರು ಹಾಗೂ ಸುಜುಕಿ ಆಕ್ಸೆಸ್ ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದಿದ್ದಾರೆ.

​₹೧೭ ಲಕ್ಷಕ್ಕೂ ಅಧಿಕ ಮೌಲ್ಯದ  ಸ್ವತ್ತು ಜಪ್ತಿ:

ದಾಳಿಯ ವೇಳೆ ಗೋವಾ ಮದ್ಯ, ಮೊಬೈಲ್ ಫೋನ್ ಹಾಗೂ ಎರಡು ವಾಹನಗಳು ಸೇರಿದಂತೆ ಒಟ್ಟು ₹೧೭,೦೦,೬೧೫ ಮೌಲ್ಯದ ಸ್ವತ್ತುಗಳನ್ನು ಜಪ್ತಿ ಮಾಡಲಾಗಿದೆ. ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬಂಧಿಸಲಾಗಿದೆ.

​ಧಾರವಾಡ ಜಿಲ್ಲೆಯ ಅಬಕಾರಿ ಉಪ ಆಯುಕ್ತರು ಹಾಗೂ ಹುಬ್ಬಳ್ಳಿ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕರ ಮಾರ್ಗದರ್ಶನದಲ್ಲಿ ಅಬಕಾರಿ ಅಧಿಕಾರಿ ವಿಶ್ವನಾಥ ಎಸ್. ಮಾವಿನಕಟ್ಟಿ, ಉಪ ನಿರೀಕ್ಷಕರಾದ ನಾಗನಗೌಡ ಪಾಟೀಲ, ಮಚ್ಛೇಂದ್ರ ರೋಡಕರ, ಅಶೋಕ ಸಫಾರೆ ಹಾಗೂ ಶಿವಾನಂದ ಸುಣಗಾರ ಈ ದಾಳಿಯಲ್ಲಿ ಪಾಲ್ಗೊಂಡಿದ್ದರು.


Share News