ಆನೇಕಲ್: ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಗಾಂಜಾ ಮಾರಾಟ ಮಾಡುತ್ತಿದ್ದ ಕುಖ್ಯಾತ ಯುವಕನೊಬ್ಬನನ್ನು ಆನೇಕಲ್ ಪೊಲೀಸರು ಮಂಗಳವಾರ ಬಂಧಿಸಿದ್ದು, ಆತನಿಂದ ಅಂದಾಜು ₹40 ಲಕ್ಷದಿಂದ ₹50 ಲಕ್ಷ ಮೌಲ್ಯದ 10 ಕೆ.ಜಿ ಗಾಂಜಾವನ್ನು ಜಪ್ತಿ ಮಾಡಿದ್ದಾರೆ.
ಆನೇಕಲ್ ಪಟ್ಟಣದ ಪವನ್ ಅಲಿಯಾಸ್ ‘ತಿಕ್ಲು ಪವನ್’ (28) ಬಂಧಿತ ಆರೋಪಿ. ಈತನ ವಿರುದ್ಧ ಆನೇಕಲ್, ಬನ್ನೇರುಘಟ್ಟ ಹಾಗೂ ಅತ್ತಿಬೆಲೆ ಪೊಲೀಸ್ ಠಾಣೆಗಳಲ್ಲಿ ಕೊಲೆ ಸೇರಿದಂತೆ ಹಲವಾರು ಗಂಭೀರ ಅಪರಾಧ ಪ್ರಕರಣಗಳು ದಾಖಲಾಗಿವೆ.
ಒಡಿಶಾದಿಂದ ಗಾಂಜಾ ಸರಬರಾಜು – ವಿಬಿಎಚ್ಸಿ ಬಳಿ ಬಂಧನ:
ಆರೋಪಿ ಪವನ್ ವಿಲಾಸಿ ಜೀವನ ನಡೆಸಲು ಒಡಿಶಾ ರಾಜ್ಯದಿಂದ ಗಾಂಜಾವನ್ನು ಅಕ್ರಮವಾಗಿ ತರಿಸಿಕೊಳ್ಳುತ್ತಿದ್ದ. ಅದನ್ನು ಸ್ಥಳೀಯ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. ಈ ಕುರಿತು ಸಿಕ್ಕ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಆನೇಕಲ್ ಪೊಲೀಸ್ , ಪಟ್ಟಣದ ವಿಬಿಎಚ್ಸಿ (VBHC) ಅಪಾರ್ಟ್ಮೆಂಟ್ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದಾಗ ಪವನ್ನನ್ನು ಜಪ್ತಿ ಮಾಡಿದ ಮಾಲು ಸಹಿತ ವಶಕ್ಕೆ ಪಡೆದಿದ್ದಾರೆ.
ಇದೇ ವೇಳೆ, ಗಾಂಜಾ ಸೇವನೆ ಮಾಡುತ್ತಿದ್ದ ಆರೋಪದ ಮೇಲೆ ಖಾಸಗಿ ವಿಶ್ವವಿದ್ಯಾಲಯದ ಉಬೇದ್ ಹಾಗೂ ಜಾಫರ್ ಎಂಬ ಇಬ್ಬರು ವಿದ್ಯಾರ್ಥಿಗಳನ್ನೂ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.